ಇಹದ ಬಾಳಿನ ಪಯಣ ಮುಗಿಸಿ ತೆರೆಳಿದ ಜಿಟಿಎನ್
G.T. Narayana Rao
ನೀವಿನ್ನು ಮೈಸೂರಿನ ೨೫೪೩೭೫೯ ಸಂಖ್ಯೆಗೆ ದೂರವಾಣಿ ಕರೆ ಮಾಡಿದರೆ ಎಂದಿನ ಸುಪರಿಚಿತ ಗಂಭೀರ ಧ್ವನಿ “ನಮಸ್ಕಾರ, ಜಿಟಿ ನಾರಾಯಣ ರಾವ್ ಎಂದಿಗೂ ಕೇಳದು. ಸರಸ್ವತೀಪುರಒನಲ್ಲಿರುವ ಅತ್ರಿ ಮನೆಯ ಗೇಟನ್ನು ಮೆತ್ತಗೆ ತೆರೆದರೂ ಸಾಕು, ಮನೆಯೊಳಗಿಂದ ತಕ್ಷಣ ಹೊರಬಂದು “ನಮಸ್ಕಾರ, ಸುಖಪ್ರಯಾಣವಾಯಿತೇ” ಎಂದು ಕೇಳುತ್ತಿದ್ದ, ಜಿ.ಟಿ.ನಾರಾಯಣ ರಾವ್ – ಹೃಸ್ವವಾಗಿ ಜಿಟಿಎನ್ – ಇನ್ನೆಂದೂ ಬಾರರು- ೨೭-೬-೨೦೦೮, ಶುಕ್ರವಾರ ಬೆಳಗ್ಗೆ ಮೆದುಳಿನ ಸ್ರಾವಕ್ಕೆ ತುತ್ತಾಗಿ, ಇಹದ ಬಾಳಿನ ಪಯಣ ಮುಗಿಸಿ ವಿಶ್ವ ರಹಸ್ಯದಲ್ಲಿ ಲೀನವಾಗಿದ್ದಾರೆ. ಗುರುವಾರ ಸಂಜೆ ಎಂದಿನಂತೆ ಅವರು ನೆರೆಯ ಸ್ನೇಹಿತರ ಮನೆಗೆ ಹೋದದ್ದು, ಅಲ್ಲಿ ಕಂಪ್ಯೂಟರಿನಲ್ಲಿ ಸಂಗೀತಕ್ಕೆ ಸಂಬಂಧಿಸಿದ ಲೇಖನ ಓದುತ್ತಿದ್ದಂತೆ “ಎಲ್ಲ ಮಂಜಾಗುತ್ತಿದೆ” ಎನ್ನುತ್ತ ಕುಸಿದರಂತೆ. ನಿದ್ದೆಗೆ ಜಾರಿದರಂತೆ. ಆ ನಿದ್ದೆ ಮಾತ್ರ ಸುದೀರ್ಘ ನಿದ್ದೆಯಾಗಿ ಹೋಯಿತು. ಎಚ್ಹೆಸ್ಕೆ ಬರೆದಿದ್ದಾರೆ ” ನಾಟಕ ಕಂಪೆನಿಯಲ್ಲಿ ಹಿರೋ ಮಲಗಿದ್ದಾನೆ. ಉಳಿದ ರಂಗನಟರು ಗೊಳೋ ಎನ್ನುತ್ತ ರೋದಿಸುತ್ತಿದ್ದಾರೆ. ಆ ರೋದನಕ್ಕೆ ಹಿರೋ ಮೇಲೇಳುತ್ತಾನೆ. ಮತ್ತೆ ಹಾಡುತ್ತಾನೆ. ಎಲ್ಲೆಡೆ ಸಂತಸ. ಇದು ನಾಟಕ. ಆದರೆ ಇಲ್ಲಿ. ಜಿಟಿಎನ್ ಮಲಗಿದ್ದಾರೆ. ಅವರ ಪಾತ್ರವನ್ನು ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ!. ಭೂಮಿಯ ಅಥವಾ ವಿಶ್ವದ ಯಾವ ಶಕ್ತಿಯೂ ಅವರನ್ನು ಮತ್ತೆ ಪುನ: ಇಹಕ್ಕೆ ತರದು” ಇದು ನಿಜ, ಎಂದನ್ನಿಸಿದ್ದು ಪುತ್ತೂರಿನಿಂದ ನಾನು ಮೈಸೂರಿಗೆ ಧಾವಿಸಿ ಅವರ ಮನೆ ತಲುಪಿದಾಗ. ಅವರು ಮಲಗಿದ್ದರು. ಮುಖದಲ್ಲಿ ಕಿರು ನಗೆ ಇತ್ತು. ಮೈ ತುಂಬ ಹೂವು ಹರಡಿತ್ತು. ಪಕ್ಕದ ಅವರ ಕೋಣೆಯಲ್ಲಿ ಪುಸ್ತಕಗಳೆಲ್ಲ ಎಂದಿನಮ್ತೆ ಹರಡಿ ಬಿದ್ದಿದ್ದುವು. ಆದರೆ ಅವರು ಮಾತ್ರ ಅಲ್ಲಿರಲಿಲ್ಲ. ಎಲ್ಲಿ ಹೋದರು?
ಜಿಟಿಎನ್ ನನಗೆ ಮಾವ. ತಂದೆಯ ಸೋದರ ಬಾವ-ಒಂದು ಸಂಬಂಧ. ಇನ್ನೋಂದು ತಂದೆಯ ಅಕ್ಕ ಅವರ ಬಾಳಿನ ಸಂಗಾತಿಯಾದವರು. ಅವರ ಮಾತುಗಳಲ್ಲಿ ಹೇಳುವುದಾದರೆ ಇದೊಂದು ಪ್ರಾಪಂಚಿಕ ಆಕಸ್ಮಿಕ. ಅದು ಹೇಗೆಯೇ ಇರಲಿ. ನನ್ನ ಬಾಳಿಗೊಂದು ರೂಪು ಕೊಟ್ಟವರು ಅವರು. ಹತ್ತನೇಯ ತರಗತಿಯಲ್ಲಿ ನಾನಿದ್ದೆ. ಅದೋಂದು ದಿನ ಪ್ತ್ರಿಕೆಯಲ್ಲಿ ಬಂತು ” ಕನ್ನಡದಲ್ಲಿ ವಿಜ್ಞಾನ ಪ್ರಬಂಧ ಸ್ಪರ್ಧೆ – ಎನ್ ಎ ಎಲ್ ಕನ್ನಡ ಸಂಘ ನಡೆಸುತ್ತಿದೆ” ಹೆದರುತ್ತ ಮಾವನಿಗೆ ಪತ್ರ ಬರೆದೆ – ಭಾಗವಹಿಸುವ ಆಸಕ್ತಿ ಪ್ರಕಟಿಸಿದೆ. ವಾರದೋಳಗೆ ಪತ್ರ ಬಂತು. ಇಪ್ಪತ್ತು ಬೇರೆ ಬೇರೆ ವಿಷಯ ಸೂಚಿಸಿದ್ದರು. ನಾನು “ಶಕ್ತಿ ಸಮಸ್ಯೆಗಳು” ಎಂಬ ವಿಷಯ ಆಯ್ಕೆ ಮಾಡಿ ಕಳುಹಿಸಿದ ಲೇಖನಕ್ಕೆ ಪ್ರಥಮ ಬಹುಮಾನ ದೊರೆಯಿತು – ನನ್ನ ಜೀವನಕ್ಕೊಂದು ಗುರಿ ತೋರಿತು. ಮತ್ತೆ ಹಿಂದಿರುಗಿ ನೋಡಲಿಲ್ಲ. ನಾನೇನೂ ದೊಡ್ಡ ಸಾಹಿತಿಯಾಗದೇ ಹೋದರೂ, ಭೌತವಿಜ್ಞಾನದಲ್ಲಿ ಉನ್ನತ ಪದವಿ ಪಡೆವ, ಲೇಖನಗಳನ್ನು ಪ್ರಕಸಲು ಸಾಧ್ಯವಾದದ್ದಾದರೆ ಅವರ ನಿರಂತರ ಟೀಕೆ-ಟಿಪ್ಪಣಿ ಪ್ರೋತ್ಸಾಹದಿಂದ. ಇದು ನನ್ನೊಬ್ಬನದ್ದಲ್ಲ. ಎಷ್ಟು ಎಳೆಯ ಮನಸ್ಸುಗಳನ್ನು ಅವರು ಆವಾಹಿಸಿಲ್ಲ.
ಅವರ ಒಂದು ಕರೆ, ಒಂದು ಪತ್ರ, ಒಂದುಮ ಮಿಂಚಂಚೆ ಸಾಕಾಗುತ್ತಿತ್ತು – ನಮ್ಮಲ್ಲಿ ಉತ್ಸಾಹ ಉಜ್ಜೀವಿಸುವುದಕ್ಕೆ.
ಒಂದು ಸಮಾಧಾನ. ಯಾರ ಸಹಾಯವೂ ಪಡೆಯದೇ, ಸ್ವಾಭಿಮಾನದಿಂದ ಅವರು ತೆರಳಿದ್ದಾರೆ. ಅವರ ಬಗ್ಗೆ ಎಷ್ಟೆಲ್ಲ ಲೇಖನಗಳು. ಅವರು ಇದ್ದು ಓದುವಂತಿದ್ದರೆ? ಎಷ್ಟೆಲ್ಲ ಪ್ರೀತಿ, ಜೀವನೋತ್ಸಾಹ, ಮೌಲ್ಯಗಳನ್ನು ನಮಗೆಲ್ಲ ಕೊಟ್ಟು ಹೋಗಿದ್ದಾರೆ! ಎಷ್ಟೆಲ್ಲ ವಿಜ್ಞಾನ ಸಾಹಿತ್ಯ ಗ್ರಂಥಗಳನ್ನು ಕೊಟ್ಟು ಹೋಗಿದ್ದಾರೆ.
ನಿಜ, ಬದುಕು ಅಂದರೆ ಹೀಗೆಯೇ. ಒಂದಿಷ್ಟು ಖುಷಿ, ಒಂದಷ್ಟು ದು:ಖ. ಅವರೊಂದಿಗೆ ಕಳೆದ ಆ ಎಲ್ಲ ದಿನಗಳು ನಮ್ಮ ಪಾಲಿನ ಮಧುರ ಕ್ಷಣಗಳು. ಆ ದಿನ ಸಂಜೆ ಜೆಎಸೆಎಸ್ ಆಸ್ಪತ್ರೆಯಲ್ಲಿ ಅವರನ್ನು ಮೆತ್ತಗೆ ಮಲಗಿಸಿ “ಮಾವಾ, ಬರುತ್ಟೇವೆ” ಎಂದು ಮನದಲ್ಲೇ ಅನ್ನುತ್ತ ವಿದಾಯ ಹೇಳಿದ ಆ ಕ್ಷ್ನಣ ಅತ್ಯಂತ ದು:ಖದ್ದು.
ಆ ಸಾತ್ವಿಕ ತೇಜಸ್ವೀ ರೂಪು,’ಸುಖಪ್ರಯಾಣವಾಯಿತೇ?’ಎಂಬ ಪ್ರಶ್ನೆ’ನಮಸ್ಕಾರ,ನಾರಾಯಣರಾವ್’ಎಂಬ ಗುಂಭದನಿ …..ಎಲ್ಲಾ ಇನ್ನು ಕೇವಲ ನೆನಪು ಎಂದು ಅರಿವಾದಾಗ ಒಂದು ರೀತಿಯ ಸಂಕಟವಾಗುತ್ತದೆ.ಐನ್ಸ್ಟೈನ್ ಗಾಂಧೀಜಿಯವರ ಬಗ್ಗೆ ಹೇಳಿದ ಮಾತು-(ಅದರ ಭಾವಾರ್ಥ ಮಾತ್ರ ನನ್ನ ನೆನಪಿನಲ್ಲಿದೆ)ಇವರ ಬಗ್ಗೆಯೂ ಅನ್ವಯಿಸುತ್ತದೆ.